ರಾಷ್ಟ್ರೋತ್ಥಾನ ರಕ್ತಕೇಂದ್ರ, ಬೆಂಗಳೂರು

ಸಾಮಾಜಿಕ ಕಳಕಳಿಯುಳ್ಳ ಸ್ವಯಂಸೇವಾಸಂಸ್ಥೆಗಳು, ಕಂಪನಿಗಳು ಹಾಗೂ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ರಾಜ್ಯದ ವಿವಿಧೆಡೆ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ನಡೆಸಿ ರಕ್ತವನ್ನು ಸಂಗ್ರಹಿಸಲಾಗುತ್ತದೆ.

ಸುಸಜ್ಜಿತ ವಾಹನ, ಸಲಕರಣೆಗಳು ಸೇರಿದಂತೆ ರಕ್ತದಾನ ಶಿಬಿರ ನಡೆಸಲು ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ರಕ್ತಕೇಂದ್ರ ಹೊಂದಿದೆ. ಈಗಾಗಲೇ ಏಕಕಾಲದಲ್ಲಿ ದಿನಕ್ಕೆ 5 ಕಡೆ ಶಿಬಿರ ನಡೆಸಲಾಗುತ್ತಿದೆ.

ರಕ್ತಕೇಂದ್ರವು 24*7 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ರೋಗಿಗಳಿಗೆ ಉತ್ತಮ ಗುಣಮಟ್ಟದ ರಕ್ತ ನೀಡುವುದಕ್ಕಾಗಿ ಆಧುನಿಕ ತಂತ್ರಜ್ಞಾನಗಳನ್ನು {SDP (Single Donor Platelets), CLIA, Automated Blood Grouping and Crossmatching} ಯಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.

ರಕ್ತಚಾಲನಾ ಪರಿಷತ್ ನಿಗದಿಪಡಿಸಿರುವ ತಪಾಸಣಾ ಶುಲ್ಕಕ್ಕಿಂತಲೂ ಕಡಿಮೆ ಶುಲ್ಕದಲ್ಲಿ ಮತ್ತು ಕೆಲ ಸಂದರ್ಭಗಳಲ್ಲಿ ಕಡುಬಡವರಿಗೆ ಉಚಿತವಾಗಿ ರಕ್ತ ಪೂರೈಸುವ ಸಾಮಾಜಿಕ ಕಾಳಜಿ ಹಾಗೂ ಬದ್ಧತೆಯ ಮೂಲಕ ರಾಷ್ಟ್ರೋತ್ಥಾನ ರಕ್ತಕೇಂದ್ರ ರಾಜ್ಯಾದ್ಯಂತ ಗುರುತಿಸಿಕೊಂಡಿದೆ.

ಜನರ ನೋವಿಗೆ ದನಿಯಾಗುವ ರಾಷ್ಟ್ರೋತ್ಥಾನ ರಕ್ತಕೇಂದ್ರದ ಚಟುವಟಿಕೆಗಳನ್ನು ಗುರುತಿಸಿದ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ರಕ್ತಚಲನಾ ಪರಿಷತ್ 2011-12ನೇ ಸಾಲಿನ ಕರ್ನಾಟಕದ ಅತ್ಯುತ್ತಮ ರಕ್ತನಿಧಿ (Best Blood Bank in Karnataka) ಎಂದು ಪ್ರಮಾಣಪತ್ರ ಹಾಗೂ ಪಾರಿತೋಷಕ ನೀಡಿ ಗೌರವಿಸಿದೆ. 2020-21ನೇ ಸಾಲಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ಅತಿ ಹೆಚ್ಚು ರಕ್ತ ಸಂಗ್ರಹಿಸಿದ್ದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಹಾಗೂ ಕರ್ನಾಟಕ ರಕ್ತಚಾಲನಾ ಪರಿಷತ್, ಬೆಂಗಳೂರು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದೆ.

2021-22ನೇ ಸಾಲಿನ ವಿವರ:

  • ಶಿಬಿರ ನಡೆದ ಒಟ್ಟು ಜಿಲ್ಲೆಗಳು – 7
  • ಆಯೋಜನೆಯಾದ ಒಟ್ಟು ರಕ್ತದಾನ ಶಿಬಿರಗಳು – 293
  • ದಾನಿಗಳಿಂದ ಸಂಗ್ರಹಿಸಿದ ರಕ್ತದ ಪ್ರಮಾಣ (ಯುನಿಟ್ ಗಳಲ್ಲಿ) – 46,748
  • ರಕ್ತವನ್ನು ಪಡೆದ ಒಟ್ಟು ರೋಗಿಗಳು -15,204
  • ವಿವಿಧ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಗೆ ಒಳಪಡುತ್ತಿರುವ, ಹೆಸರು ನೋಂದಾಯಿಸಿರುವ ಒಟ್ಟು ರೋಗಿಗಳು – 283
  • ರಕ್ತದಾನ ಶಿಬಿರಗಳ ಶ್ರೇಣಿ 67% ರಿಂದ 83% ಗೆ ಏರಿಕೆಯಾಗಿದೆ.

2021-22ನೇ ಸಾಲಿನ ರಕ್ತದಾನ ಶಿಬಿರಗಳ ವಿವರ:

  • ಸ್ವಯಂಸೇವಾ ಸಂಸ್ಥೆಗಳು – 233
  • ಶಾಲೆಗಳು – 22
  • ಕಂಪನಿಗಳು – 20
  • ರಕ್ತದಾನಿಗಳು – 21,380
  • ಸಂಗ್ರಹಿಸಿದ ರಕ್ತ (ಯುನಿಟ್‍ಗಳಲ್ಲಿ) – 46,748
  • ಫಲಾನುಭವಿಗಳು –  15,204

ಆಸರೆ

  • ಜೀವಮಾನವಿಡೀ ನಿರಂತರ ರಕ್ತಪೂರಣದ ಅವಶ್ಯಕತೆ ಇರುವ ತಲಸ್ಸೇಮಿಯಾದಿಂದ ಬಳಲುತ್ತಿರುವ 450ಕ್ಕೂ ಅಧಿಕ ಜನರಿಗೆ 15ರಿಂದ 20 ದಿನಗಳಿಗೊಮ್ಮೆ ನಿಶ್ಶುಲ್ಕವಾಗಿ ರಕ್ತವನ್ನು ನೀಡಲಾಗುತ್ತಿದೆ.